ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ 40ನೆ ವರ್ಧಂತ್ಯುತ್ಸವ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಡಿಸೆ೦ಬರ್ 18 , 2013
|
ಡಿಸೆ೦ಬರ್ 18, 2013
|
ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ 40ನೆ ವರ್ಧಂತ್ಯುತ್ಸವ
ಮಂಗಳೂರು :
ನಮಗೆ ತಿಟ್ಟು- ಮಟ್ಟುಗಳ ಭೇದವಿಲ್ಲ. ಯಕ್ಷಗಾನಕ್ಕೆ ತನ್ನದೇ ಆದ ಪ್ರಭಾವಿ ವಲಯವಿದೆ. ಯಕ್ಷಗಾನದಲ್ಲಿ ಪ್ರತಿಯೊಬ್ಬರೂ ತಮ್ಮ ಸ್ವತಂತ್ರ ಅಭಿಪ್ರಾಯಗಳನ್ನು ನೀಡಬಹುದೇ ಹೊರತು ಇದಮಿತ್ತಂ ಎನ್ನುವಂತೆ ನಾನು ಹೇಳಿದ್ದೇ ಸತ್ಯ ಅನ್ನೋದು ತಪ್ಪು ಎಂದು ಹಿರಿಯ ವಿದ್ವಾಂಸ, ಸೋಮೇಶ್ವರ-ಉಚ್ಚಿಲ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರದ ಅಧ್ಯಕ್ಷ ಪ್ರೊ.ಅಮೃತ ಸೋಮೆಶ್ವರ ಅಭಿಪ್ರಾಯಪಟ್ಟರು.
ಮಂಗಳೂರಿನ ಪುರಭವನದಲ್ಲಿ ಬುಧವಾರ ನಡೆದ ಸೋಮೇಶ್ವರ-ಉಚ್ಚಿಲ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರದ 40ನೆ ವರ್ಧಂತ್ಯುತ್ಸವದ ಅಂಗವಾಗಿ ನಡೆದ ಯಕ್ಷಗಂಗೋತ್ರಿ ಕೃತಿ ಬಿಡುಗಡೆ ಹಾಗೂ ಹಿರಿಯ ಕಲಾವಿದರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಕ್ಷಗಾನ ನಿಂತ ನೀರಲ್ಲ, ಚಲನಶೀಲತೆ ಜೀವಂತ ಕಲೆಯ ಸ್ವಭಾವವೂ ಹೌದು ಮಿತಿಯೂ ಹೌದು ಎಂದರು.
ಯಕ್ಷಗಂಗೋತ್ರಿ ಕೃತಿ ಬಿಡುಗಡೆ ಮಾಡಿ ಯಕ್ಷಗಾನ ಬಯಲಾಟ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಮಾತನಾಡಿ ಯಕ್ಷಗಾನ ಕಲೆಯನ್ನು ಸಂವಹನ ಕಲೆಯನ್ನಾಗಿ ಉಳಿಸಬೇಕಾದರೆ ಅದು ಹವ್ಯಾಸಿ ಕಲಾವಿದರಿಂದ ಸಾಧ್ಯ. ಯಕ್ಷಗಂಗೋತ್ರಿ ಕೃತಿಯಲ್ಲಿ ಯಕ್ಷಗಾನದ ಪಾರಂಪರಿಕ, ಆಧುನಿಕ ದೃಷ್ಠಿಕೋನದ ಉಪಯುಕ್ತವಾದ ಹಲವಾರು ಲೇಖನಗಳಿವೆ ಎಂದರು.
ಮಂಗಳೂರು ವಿ.ವಿ ಯಕ್ಷಗಾನ ಕೇಂದ್ರ ನಿರ್ದೇಶಕ ಪ್ರೊ.ಚಿನ್ನಪ್ಪ ಗೌಡ, ಯಕ್ಷಗಾನ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಸಂಘದ ಕಾರ್ಯದರ್ಶಿ ಕೆ.ಸದಾಶಿವ, ಕೋಶಾಕಾರಿ ಬಾಬು ಜಿ.ಕೋಟೆಕಾರ್ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ಹಾಸ್ಯ ಕಲಾವಿದರಾದ ಮಿಜಾರು ಅಣ್ಣಪ್ಪ ಹಾಗೂ ಖ್ಯಾತ ಸ್ತ್ರೀ ಪಾತ್ರಧಾರಿ ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಯಕ್ಷಗಂಗೋತ್ರಿ ಕೃತಿ: ಸೋಮೇಶ್ವರ-ಉಚ್ಚಿಲ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ ನಡೆದು ಬಂದ ದಾರಿಯ ಹೆಜ್ಜೆ ಗುರುತುಗಳನ್ನು ದಾಖಲಿಸುವ ಜತೆಗೆ ಯಕ್ಷಗಾನದ ಕುರಿತು ವಿದ್ವಾಂಸರು ಬರೆದಿರುವ 32 ಅರ್ಥಪೂರ್ಣ ಕೃತಿಗಳ ಸಂಗ್ರಹ. ಹಳೆಯ ಭಾವಚಿತ್ರಗಳ ಸಂಗ್ರಹ ಪುಸ್ತಕದ ಇನ್ನೊಂದು ವಿಶೇಷತೆ. 150ರೂ., ಬೆಲೆಯ ಪುಸ್ತಕ ಯಕ್ಷಗಾನದ ಕುರಿತು ವಿಭಿನ್ನ ದೃಷ್ಟಿಕೋನದ ಬರಹಗಳನ್ನು ದಾಖಲಿಸಿದೆ.
ಕೃಪೆ :
http://vijaykarnataka.com
|
|
|